ದುರಸ್ಥಿಗೊಳಿಸಿದ ಶೌರ್ಯ ಶ್ರೀ ಧರ್ಮಸ್ಥಳ ತಂಡ

ಬಂಟ್ವಾಳ, ಫೆಬ್ರವರಿ 28,2025: ಬೀಳುವ ಸ್ಥಿತಿಯಲ್ಲಿದ್ದ ಮನೆಯ ಮೇಲ್ಛಾವಣಿ ರಿಪೇರಿ ಮಾಡಿಕೊಟ್ಟು ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದ್ದಾರೆ ಬಂಟ್ವಾಳ ತಾಲ್ಲೂಕು ಕಾಡಬೆಟ್ಟುವಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಮಾಶಾಸನ ಫಲಾನುಭವಿ:
ಮಿತ್ತಟ್ಟು ಕಂದಾಡಿಯ ನಿವಾಸಿ ಸುಂದರಿ ಇವರದು ಕಷ್ಟದ ಬದುಕು. ಜೀವನ ನಿರ್ವಹಣೆಗೂ ಕಷ್ಠ ಪಡುತ್ತಿರುವ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದ್ದು ಆಸರೆಯಾಗಿದೆ. ತನ್ನ ಅಕ್ಕ ಮತ್ತು ಇವರು ಇಬ್ಬರೇ ವಾಸವಾಗಿದ್ದು ಸಣ್ಣ ಮನೆಯನ್ನು ಹೊಂದಿದ್ದಾರೆ. ಹಳೆಯದಾಗಿರುವ ಮನೆಯ ಮೇಲ್ಛಾವಣಿ ಸಡಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿತ್ತು. ಮಳೆಗಾಲದಲ್ಲಿ ಸೋರುತ್ತಿದ್ದ ಮನೆಯ ಮಾಡು ಹಾಗೇಯೇ ಬಿಟ್ಟಲ್ಲಿ ಮುಂಬರುವ ಮಳೆಗಾಲದಲ್ಲಿ ನೆಲಕ್ಕುರುಳುವ ಭೀತಿಯಿತ್ತು. ರಿಪೇರಿ ಮಾಡಿಸಲು ಕೈಯಲ್ಲಿ ಹಣವಿಲ್ಲದೇ ಇರುವುದರಿಂದ ಜೀವ ಭಯದಿಂದಲೇ ಮನೆಯೊಳಗೆ ದಿನ ಕಳೆಯುತ್ತಿದ್ದರು.
ಶೌರ್ಯ ಸ್ವಯಂಸೇವಕರಿಗೆ ಮನವಿ: ಕಾಡಬೆಟ್ಟು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕವು ಕಳೆದ ಎರಡು ವರ್ಷಗಳಿಂದ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಬಡವರ ಮನೆ ರಿಪೇರಿಗೆ ಮೊದಲ ಆದ್ಯತೆ ಕೊಡುತ್ತಿರುವ ಈ ತಂಡದ ಹೆಸರು ಗ್ರಾಮದಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಇದೆ. ಈ ತಂಡದ ಬಗ್ಗೆ ತಿಳಿದುಕೊಂಡಿದ್ದ ಸುಂದರಿ ಇವರ ಪಕ್ಕದ ಮನೆಯ ನಿವಾಸಿ ಸುಂದರ ಮೂಲ್ಯ ಇವರು ಮನೆ ರಿಪೇರಿ ಮಾಡಿಕೊಡುವ ಬಗ್ಗೆ ಸ್ವಯಂಸೇವಕರಲ್ಲಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ತಂಡ ಮನೆ ರಿಪೇರಿ ಕೆಲಸವನ್ನು ಮಾಡಿಕೊಟ್ಟಿದೆ.

ಗಟ್ಟಿಯಾದ ಮೇಲ್ಚಾವಣಿ:
ಮನೆಯ ಗೋಡೆ ಗಟ್ಟಿಯಾಗಿರುವುದನ್ನು ಗಮನಿಸಿದ ಸ್ವಯಂಸೇವಕರು ಗೋಡೆಯ ತೆರವು ಅಗತ್ಯ ಇಲ್ಲದೇ ಇರುವುದನ್ನು ಮನಗಂಡು ಮೇಲ್ಚಾವಣಿ ರಿಪೇರಿಗೆ ಮುಂದಾದರು. ಜಾಗರೂಕತೆಯಿಂದ ಹಂಚುಗಳನ್ನು ಇಳಿಸಿ ಸ್ವಚ್ಚಗೊಳಿಸಿದರು. ಮನೆಗೆ ಹೊದಿಸಿದ ರೀಪುಗಳು ಹಾಳಾಗಿದ್ದು ಬೀಳುವ ಹಂತದಲ್ಲಿದ್ದವು. ಇವರುಗಳನ್ನು ತೆರವುಗೊಳಿಸಿ ಹೊಸದಾಗಿ ರೀಪು, ಪಕಾಸುಗಳನ್ನು ಅಳವಡಿಸಿದರು. ಹಂಚಿನ ಹೊದಿಕೆ ಮಾಡಿ, ಮನೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಮನೆಯ ಸುತ್ತಲಿನ ಪರಿಸರವನ್ನೂ ಸ್ವಚ್ಚಗೊಳಿಸಿ ಸಹಕಾರ ನೀಡಿರುತ್ತಾರೆ.

ಸಾರ್ವಜನಿಕರ ಸಹಕಾರ:
ಮನೆಯ ಪರಿಸ್ಥಿತಿಯನ್ನು ಅರಿತಿದ್ದು ಗ್ರಾಮದ ಗಣ್ಯರು ಬಡ ಕುಟುಂಬದ ಸಹಾಯಕ್ಕೆ ನಿಂತಿದ್ದಾರೆ. ಶ್ರಮ ಸೇವೆಯನ್ನು ನೀಡಲು ಶೌರ್ಯ ತಂಡ ಸಿದ್ಧವಿರುವುದನ್ನು ಗಮನಿಸಿದ ಗಣ್ಯರು ಸಹಕರಿಸಲು ತಾವು ಸಹ ಮುಂದಾಗಿದ್ದಾರೆ. ಮನೆಯ ಹೊದಿಕೆಗೆ ಅಗತ್ಯವಿರುವ ರೀಪುಗಳನ್ನು ಪ್ರದೀಪ್ ರೈ ಇವರು ನೀಡಿದ್ದಾರೆ. ಇನ್ನಿತರ ಅಗತ್ಯ ಸಲಕರಣೆಗಳನ್ನು ಪ್ರಮೋದ್ ಕುಮಾರ್ ರೈ ಇವರು ನೀಡಿದ್ದಾರೆ. ಮನೆ ರಿಪೇರಿ ಶ್ರಮದಾನದಲ್ಲಿ ತೊಡಗಿಕೊಂಡ ಸ್ವಯಂಸೇವಕರಿಗೆ ಚಹಾ ತಿಂಡಿ ಮತ್ತು ಊಟ ವ್ಯವಸ್ಥೆಯನ್ನು ಸಂಪತ್ ಶೆಟ್ಟಿ ಮತ್ತು ಮಹಾಬಲ ರೈ ಮಾಡಿರುತ್ತಾರೆ. ಉಳಿದಂತೆ ಕೆಲವು ಖರ್ಚುಗಳನ್ನು ಪ್ರವೀಣ್ ಮತ್ತು ನಾರಾಯಣ್ ಶೆಟ್ಟಿ ನೋಡಿಕೊಂಡಿರುತ್ತಾರೆ. ಆಚಾರಿ ಕೆಲಸವನ್ನು ಧನು ಪೂಜೆ ಶೌರ್ಯ ತಂಡದ ಸದಸ್ಯರಾದ ಪ್ರಮೋದ್ ಆಚಾರಿ ಅವರು ಕೆಲಸ ಮಾಡಿರುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ಕುಟುಂಬಕ್ಕೆ ಕಳೆದ ನಾಲ್ಕು ವರ್ಷದಿಂದ ಮಾಶಾಸನ ನೀಡುತ್ತಾ ಬಂದಿದೆ. ಅಲ್ಲದೇ ಮನೆಯ ರಿಪೇರಿಗೆ ಶೌರ್ಯ ತಂಡದ ಸಹಕಾರವೂ ದೊರೆತಿದೆ. ಇದರಿಂದ ಸಂತೋಷಗೊಂಡ ಕುಟುಂಬವು “ನಮಗೆ ಧರ್ಮಸ್ಥಳದಿಂದ ಸಿಕ್ಕಿರುವ ಸಹಕಾರ ಯಾರಿಂದಲೂ ಸಿಕ್ಕಿಲ್ಲ. ಯೋಜನೆಯ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದು ಮಾಶಾಸನ ಹಣ ನೀಡುವುದಲ್ಲದೇ ಕುಶಲೋಪವರಿಯನ್ನೂ ವಿಚಾರಿಸುತ್ತಾರೆ. ಕಳೆದ ಮಳೆಗಾಲದಲ್ಲಿ ಆಹಾರ ಧಾನ್ಯದ ಕಿಟ್ ನೀಡಿ ಸಹಾಯ ಮಾಡಿದ್ದರು” ನೆನಪಿಸಿಕೊಳ್ಳುತ್ತಾರೆ ಸುಂದರಿ ಇವರು.

ಘಟಕದ ಸಂಯೋಜಕಿ ರೇಖಾ ಪಿ, ಘಟಕ ಪ್ರತಿನಿಧಿ ಪ್ರವೀಣ್, ಸ್ವಯಂಸೇವಕರಾದ ಸಂಪತ್ ಶೆಟ್ಟಿ, ರಮೇಶ, ಶಶಿಕಲಾ, ಪವಿತ್ರ, ಪವಿತ್ರ ಮದ್ವ, ಲಕ್ಷ್ಮಣ್, ಅಶೋಕ್ ಬೋಲ್ಮಾರು, ಅಶೋಕ ಹಾರದ್ದು, ನಾರಾಯಣ್ ಶೆಟ್ಟಿ, ರಮೇಶ್, ವಿನೋದ, ಪ್ರಿಯಾಂಕ, ಮೋಹನಂದ, ಆನಂದ, ರೋಹಿತ್, ಪ್ರಮೀಳ ಇವರು ಮನೆ ರಿಪೇರಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ತಾಲ್ಲೂಕು ಯೋಜನಾಧಿಕಾರಿ ಜಯಾನಂದ, ಮೇಲ್ವಿಚಾರಕರಾದ ಸವಿತಾ ಇವರು ಸ್ವಯಂಸೇವಕರಿಗೆ ಪ್ರೇರಣೆ ನೀಡಿರುತ್ತಾರೆ. ಶೌರ್ಯ ಘಟಕದ ಸೇವೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ